ಮಹಾಭಾರತ ಕಥೆಗಳು

ವ್ಯಾಸರು ‘ಮಹಾಭಾರತ’ವನ್ನು ರಚಿಸಿದ್ದು ಭಾರತದ ಪುರಾಣಗ್ರಂಥಗಳಲ್ಲಿ ಅತಿ ಪ್ರಾಚೀನ ಹಾಗೂ ಪ್ರಸಿದ್ಧವಾದವುಗಳು ಅಂದರೆ ರಾಮಾಯಣ ಹಾಗೂ ಮಹಾಭಾರತ. “ರಾಮಾಯಣ” ಮಹಾಕಾವ್ಯವನ್ನು ವಾಲ್ಮೀಕಿ ಮುನಿ ರಚಿಸಿದರೆ, ‘ಮಹಾಭಾರತ’ ವನ್ನು ವ್ಯಾಸಮಹರ್ಷಿಗಳು ರಚಿಸಿದರು. ವ್ಯಾಸ ಮಹರ್ಷಿ ಸಾಮಾನ್ಯರಲ್ಲ. ವೇದ, ಶಾಸ್ತ್ರಗಳಲ್ಲಿ ಪರಿಣಿತರು, ಪರಿಪಕ್ವ ಜ್ಞಾನಿ. ವರ್ತಮಾನ, ಭೂತ, ಭವಿಷತ್ ವಿಚಾರಗಳೆಲ್ಲವನ್ನೂ ಬಲ್ಲವರು. “ಮಹಾಭಾರತ” ಸಂಸ್ಕøತ ಕಾವ್ಯಗಳಲ್ಲಿಯೇ ಬೃಹದ್ಗ್ರಂಥ. ಧಾರ್ಮಿಕ, ರಾಜನೈತಿಕ, ಸಾಮಾಜಿಕ ಮೂರೂ ಬಗೆಯಲ್ಲೂ ಸ್ವಾರಸ್ಯ ಸಂಗತಿಗಳಿಂದ ಕೂಡಿದ್ದು, ಅರ್ಥಪೂರ್ಣ ಹಾಗೂ ಸತ್ವಪೂರ್ಣ ಎನಿಸಿರುವ ಗ್ರಂಥ. ಇದನ್ನು ಬರೆದು ಮುಗಿಸಲು ವರ್ಷಾನುಗಟ್ಟಲೆ ಹಿಡಿದರೂ, ಒಬ್ಬರಿಂದಲೇ ಈ ಕಾರ್ಯ ಅಸಂಭವವೆಂಬುದು ಅವರಿಗೂ ತಿಳಿದಿದ್ದ ವಿಷಯವೇ. ಆದರೂ ಯಾವುದೇ ಕೈಹಾಕಿದ ಕಾರ್ಯವನ್ನು ಮಧ್ಯದಲ್ಲಿಯೇ ಅಪೂರ್ಣಗೊಳಿಸಿ, ಹಿಂದಕ್ಕೆ ಸರಿಯುವವರಲ್ಲ.
ತಾವು ಇದರ ಪೂರ್ಣರಚನೆಯ ಸಲುವಾಗಿ ಸಾರ್ಥಕಪಡಿಸಿಕೊಳ್ಳಲು ದೀರ್ಘಕಾಲ ಹಿಡಿಯುವುದೆಂಬುದರ ಅರಿವೂ ಇತ್ತು. ಇದರ ಪರಿಹಾರಕ್ಕಾಗಿ ತುಂಬಾ ಯೋಚಿಸಿದರು. ಕಡೆಗೆ ವಿದ್ಯಾಗಣಪತಿಯನ್ನೇ ಈ ಕಾರ್ಯದಲ್ಲಿ ನೆರವಿಗಾಗಿ ಆಹ್ವಾನಿಸಲು ನಿರ್ಧರಿಸಿದರು. ಗಣಪತಿಯ ಬಳಿಗೆ ಹೋಗಿ ತಮ್ಮ ಮನೋಭಿಲಾಷೆಯ ಬಗ್ಗೆ ವಿನಮ್ರತೆಯೊಂದಿಗೆ ವಿನಂತಿಸಿಕೊಂಡರು. ಗಣಪ ಸಮ್ಮತಿಸಿದ. ಆದರೆ ವ್ಯಾಸರ ಅಪರಿಮಿತ ಜ್ಞಾನದ ಶಕ್ತಿ-ಸಾಮಥ್ರ್ಯವನ್ನು ಅಳೆಯಲು ಹಾಗೂ ಅದರ ಅರಿವನ್ನು ಲೋಕದ ಜನರಿಗೆ ಮಾಡಿಕೊಡುವ ಸಲುವಾಗಿ ಒಂದು ಕರಾರು ಮುಂದಿಟ್ಟ : “ನಾನೇನೋ ನೀನು ಹೇಳಿದಂತೆ, ಬರೆಯುತ್ತಾ ಹೋಗುತ್ತೇನೆ; ಆದರೆ ನನ್ನದು ಅತಿಶೀಘ್ರಲಿಪಿ. ಅದಕ್ಕೆ ಹೊಂದಿಕೊಳ್ಳಲು ನಿನಗೆ ಕಷ್ಟ ಆಗಬಹುದು, ನನ್ನ ಲೇಖನಿ ನಿಲ್ಲದಂತೆ ಹೇಳುತ್ತಾ ಹೋಗಲು, ನೀನು ಸಿದ್ಧನಿದ್ದರೆ ನನ್ನದೇನೂ ಆಕ್ಷೇಪಣೆ ಇಲ್ಲ.” ವ್ಯಾಸರೂ ಬುದ್ಧಿವಂತಿಕೆಯಲ್ಲಿ ಕುಶಾಗ್ರರೇ; ಕ್ಷಣಕಾಲ ಗಣಪತಿಯ ಕರಾರಿನ ಬಗ್ಗೆ ಆಲೋಚಿಸಿ ಹೇಳಿದರು: “ಹಾಗೆಯೇ ಆಗಲಿ. ಅದರೆ ನಾನು ಒಂದೊಂದೇ ಅಧ್ಯಾಯವನ್ನು ಹೇಳಿ ಮುಗಿಸುತ್ತಿದ್ದಂತೆ, ಒಂದೊಂದು ಸಾಹಿತ್ಯ ಸೂತ್ರವನ್ನು ತಿಳಿಸುತ್ತಾ ಹೋಗುತ್ತೇನೆ. ನೀನು ಅದನ್ನು ಅರ್ಥಮಾಡಿಕೊಂಡು, ಅನಂತರ ಬರವಣಿಗೆಯನ್ನು ಮುಂದುವರಿಸಬೇಕು.” ಗಣಪತಿ ವ್ಯಾಸರ ಕುಶಾಗ್ರ ಬುದ್ಧಿಯನ್ನು ಮೆಚ್ಚಿ ವ್ಯಾಸರ ಮಾತಿನಂತೆ ಮಹಾಭಾರತದ ರಚನೆಯನ್ನು ಪೂರೈಸಲು ಸಹಕಾರ ನೀಡಿದ. ಹೀಗೆ ವೇದವ್ಯಾಸರು ತಮ್ಮ ಬೃಹತ್ ಕಾವ್ಯವೆನಿಸಿದ ‘ಮಹಾಭಾರತ’ ವನ್ನು ವಿದ್ಯಾಗಣಪತಿಯ ಸಂಪೂರ್ಣ ಸಹಕಾರದ ನೆರವಿನೊಂದಿಗೆ ರಚಿಸಿ ಮುಗಿಸಿದರು.