About Us

ಶ್ರೀ ಶಂಕರಾನಂದ ಆಶ್ರಮ ಸುಸ್ವಾಗತ

ಆತ್ಮೀಯರೆ,
ಈಗಿನ ರಾಣೆಬೆನ್ನೂರು ತಾಲ್ಲೂಕ್, ಹಲಗೇರಿ ಎಂಬ ಗ್ರಾಮವೊಂದರಲ್ಲಿ ಶಿವಭಕ್ತೆಯರ ಕುಟುಂಬವೊಂದಿತ್ತು. ಗಂಡ ಹೆಂಡತಿ ಈರ್ವರೂ ಶಿವನ ಭಕ್ತರಾಗಿದ್ದರು. ಆದರೂ ಅವರಿಗೆ ಮಕ್ಕಳಿಲ್ಲ ಎಂಬ ಕೊರಗು ಇತ್ತು. ದಿನಾಲೂ ಶಿವನಲ್ಲಿ ಮಕ್ಕಳನ್ನು ಕರುಣಿಸಲೆಂದು ಆರಾಧಿಸುತ್ತಿದ್ದರು. ಇವರ ದೃಢವಾದ ಭಕ್ತಿ ಹಾಗೂ ದೇವರ ಕೃಪೆಯಿಂದ ಒಂದು ಗಂಡು ಮಗು ಜನನವಾಯಿತು. ಶಿವನ ಕೃಪೆಯಿಂದ ಹುಟ್ಟಿದ್ದರಿಂದ ಮಗುವಿಗೆ ಶಂಕರ ಎಂದು ನಾಮಕರಣ ಮಾಡಿದರು. ಸಣ್ಣವಯಸ್ಸಿನಲ್ಲೇ ಶಂಕರನು ಪುರಾಣದ ಕಥೆಗಳನ್ನೆಲ್ಲಾ ತಂದೆತಾಯಂದಿರ ಹತ್ತಿರ ತಿಳಿದುಕೊಂಡರು. ತಾಯಿ ಶಂಕರನಿಗೆ ಶಾಲೆಗೆ ಹೋಗುವಾಗ ಬರುವಾಗ ಓಂ ನಮಃ ಶಿವಾಯ ಮಂತ್ರವನ್ನು ಹೇಳಿಕೊಳ್ಳುವಂತೆ ಬೋಧಿಸಿದರು. ಆಗಲೇ ಪುಟ್ಟ ಬಾಲಕನಲ್ಲಿ ವೈರಾಗ್ಯ ಚಿಗುರೊಡೆಯುತ್ತಿತ್ತು. ಅವರಿಗೆ 20 ವರ್ಷ ವಯಸ್ಸಾದಂತೆ ಮದುವೆ ಮಾಡಬೇಕೆಂದು ಮನೆಯಲ್ಲಿ ತಯಾರಿ ಮಾಡಿಕೊಳ್ಳಲಾಯಿತು. ಈ ವಿಷಯ ತಿಳಿದ ಶಂಕರರು ದುಃಖ ರೂಪವಾದ ಸಂಸಾರ ಹಾಗೂ ಮನೆಯನ್ನು ತ್ಯಜಿಸಿ, ಅಧ್ಯಾತ್ಮಿಕ ಜ್ಞಾನ. ಅಳವಡಿಸಿಕೊಳ್ಳಬೇಕೆಂದು ಗುರುಗಳನ್ನು ಅನ್ವೇಷಣೆ ಮಾಡಿ ಊರೂರು ತಿರುಗಿ ಕೊನೆಗೆ ನಾಸಿಕ್‍ನಲ್ಲಿ ಶ್ರೀ ಶಿವಾನಂದ ಸ್ವಾಮಿಗಳನ್ನು ಭೇಟಿ ಮಾಡಿ ಅವರ ಹತ್ತಿರ ಭಗವದ್ಗೀತೆಯ ಶ್ಲೋಕವನ್ನು ಆಳವಾಗಿ ಅಭ್ಯಸಿಸಿ ಅದರಲ್ಲಿ ಪಾರಂಗತರಾದರು.
ಗುರುಗಳ ಆಜ್ಞೆಯಂತೆ ತಾವು ಕಲಿತ ಗೀತಾ ಜ್ಞಾನಾರ್ಜನೆಯನ್ನು ಇನ್ನೊಬ್ಬರಿಗೆ ಬೋಧಿಸುವ ಉದ್ದೇಶದಿಂದ ಭರತಖಂಡದ ಉದ್ದಗಲಕ್ಕೂ ಪ್ರಯಾಣ ಮಾಡಿ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಎಂಬ ಗ್ರಾಮವನ್ನು ತಲುಪಿದಾಗ ಅಲ್ಲಿ ಒಂದು ಘಟನೆ ಜರುಗಿತು. ಹಾವು ಹಾಗೂ ಕಪ್ಪೆ ಅಲ್ಲಿ ಸ್ನೇಹದಿಂದಿರಲು ನೋಡಿ ಆಶ್ಚರ್ಯಚಕಿತರಾದರು. ಅಲ್ಲಿಯೇ ಆಶ್ರಮ ಸ್ಥಾಪಿಸಬೇಕೆಂದು ನಿರ್ಧರಿಸಿದರು. ಅದರಂತೆ 1929ರಲ್ಲಿ ತಮ್ಮ ಗುರುಗಳ ನಾಮಾಂಕಿತವಾದ ಶ್ರೀ ಶಿವಾನಂದಾಶ್ರಮ ಸ್ಥಾಪನೆಯಾಯಿತು.
ಶ್ರೀಶಂಕರಾನಂದ ಸ್ವಾಮಿಗಳು ತಮ್ಮ ವಿದ್ವತ್ತಿನಿಂದ ಒಳ್ಳೆಯ ಉಪನ್ಯಾಸಕರಾಗಿ ಬಲುಬೇಗನೆ ಪ್ರಸಿದ್ಧಿಯಾದರು. ಇವರ ಗೀತೆಯ ವ್ಯಾಖ್ಯಾನ ಕೇಳಲು ನೂರಾರು ಮಂದಿ ತಂಡೋಪತಂಡವಾಗಿ ಬರತೊಡಗಿದರು. ತಮ್ಮ ನೆಚ್ಚಿನ ಶಿಷ್ಯರಾದ ಶ್ರೀ ರಾಮಕೃಷ್ಣಾನಂದ ರೊಡಗೂಡಿ ಆಂಧ್ರದ ಉದ್ದಗಲಕ್ಕೂ ಗೀತೆಯ ಪ್ರಚಾರ ಮಾಡಿದರು. ಆಗಿನ ಕಾಲದಲ್ಲಿ ಇವರಿಬ್ಬರನ್ನು ಶ್ರೀಕೃಷ್ಣ ಅರ್ಜುನನೆಂದು ಕರೆಯುತ್ತಿದ್ದರು. ಗೀತೆಯೆಂದರೆ ಅಜ್ಜಂಪುರದ ಶ್ರೀ ಶಿವಾನಂದಾಶ್ರಮ ಎಂಬುವಷ್ಟರ ಮಟ್ಟಿಗೆ ಆಶ್ರಮವು ಪ್ರಸಿದ್ಧಿಯಾಯಿತು. ಹೀಗೆಯೇ ಕರ್ನಾಟಕ ಆಂಧ್ರದಲ್ಲಿ 9 ಆಶ್ರಮ ಸ್ಥಾಪನೆ ಮಾಡಿದರು.
ಒಂದು ಸಾರಿ ದಿವಂಗತ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಕಾರ್ಯನಿಮಿತ್ತ ಚಿಕ್ಕಮಗಳೂರಿಗೆ ಭೇಟಿಕೊಟ್ಟಾಗ ಸ್ವಾಮಿಗಳನ್ನು ಕಂಡು ನಮಸ್ಕರಿಸಿದರು. ಆಗ ಸ್ವಾಮಿಗಳು ತಮ್ಮ ಕೊರಳಲ್ಲಿದ್ದ ರುದ್ರಾಕ್ಷಿ ಮಾಲೆಯನ್ನೇ ಅವರ ಕೊರಳಿಗೆ ಹಾಕಿ ಆಶೀರ್ವಾದ ಮಾಡಿದರು. ಅದನ್ನು ಇಂದಿರಾಗಾಂಧಿಯವರು ತಮ್ಮ ಕೊನೆಯ ಜೀವನ ಕ್ಷಣದವರೆಗೂ ಕೊರಳಲ್ಲಿ ಧರಿಸಿದ್ದರು.

About us About us

ಶ್ರೀಶಂಕರಾನಂದ ಸ್ವಾಮಿಗಳು 1969ರಲ್ಲಿ ಬ್ರಹ್ಮಲೀನರಾದ ಮೇಲೆ ಅವರ ಶಿಷ್ಯಂದಿರು, ಆಶ್ರಮದ ಖ್ಯಾತಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಸಿಕೊಂಡು ಹೋದರು. ಶ್ರೀಗುರುಗಳ ಅಣತಿಯಂತೆ ಅವರ ಶಿಷ್ಯಂದಿರಾದ ಶ್ರೀ ಚಿಕ್ಕೇಶ್ವರಾಚಾರ್ಯರು ಶ್ರೀಕಂಠಾಚಾರ್ಯರು ಮತ್ತು ಶ್ರೀ ಪುಟ್ಟಸ್ವಾಮಿಗಳು ಅವರವರ ಕ್ಷೇತ್ರದಲ್ಲಿ ಗೀತೋಪನ್ಯಾಸ ಮುಂದುವರಿಸಿದರು. ಶ್ರೀ ಚಿಕ್ಕೇಶ್ವರಾಚಾರ್ಯರು ಗುರುಪರಂಪರೆ ಬೆಳೆಸಬೇಕೆಂದು ನಿರ್ಧರಿಸಿ ತಮ್ಮ ಕುಟುಂಬದ ಜವಾಬ್ದಾರಿಯನ್ನೆಲ್ಲಾ ಮಾತ್ರೋಶ್ರೀ ಹಾಗೂ ಮಕ್ಕಳಿಗೆ ವಹಿಸಿ ಎಲ್ಲವನ್ನೂ ತ್ಯಾಗಮಾಡಿ 2003ನೇ ವೈಶಾಖ ಶುದ್ಧತದಿಗೆ ದಿನದಂದು ಸಂನ್ಯಾಸ ಆಶ್ರಮ ಸ್ವೀಕರಿಸಿ ಶ್ರೀ ಪ್ರಭೋದಾನಂದ ಸ್ವಾಮಿ ಎಂಬ ನಾಮಾಂಕಿತದಿಂದ ಅಜ್ಜಂಪುರ ಆಶ್ರಮದ ಶ್ರೇಯೋಭಿವೃದ್ಧಿಗಾಗಿ ಪ್ರಯತ್ನಪಟ್ಟರು. ಎಲ್ಲೂ ಮಾಡದೇ ಇರುವ ಗೀತಾಜ್ಞಾನ ಯಜ್ಞವನ್ನು ಪ್ರಾರಂಭಮಾಡಿದರು.
ಆಶ್ರಮದ ಶಾಖೆಯನ್ನು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಸ್ಥಾಪನೆ ಮಾಡಬೇಕೆಂಬ ಗುರುಗಳ ಸಂಕಲ್ಪದ ಅನುಸಾರ. 2006ನೇ ಮಾರ್ಚಿಯಲ್ಲಿ ಉಳ್ಳಾಲ ರೋಡಿನಲ್ಲಿರುವ ಜ್ಞಾನಭಾರತಿ ಆವರಣದಲ್ಲಿ ಶ್ರೀ ಶಂಕರಾನಂದಾಶ್ರಮವನ್ನು ಸ್ಥಾಪನೆ ಮಾಡಿ ಶ್ರೀ ಗುರುಗಳ ಆರಾಧನೆ, ಶಂಕರ ಜಯಂತಿ, ಪಂಚಾಕ್ಷರಿ ಜಪಯಜ್ಞ, ಗೀತಾ ಜಯಂತಿಯನ್ನು ಆಶ್ರಮದಲ್ಲಿ ಚಾಚು ತಪ್ಪದೆ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ಈ ಅಧ್ಯಾತ್ಮ ಜ್ಞಾನವು ಮುಂದಿನ ಜನಾಂಗದವರಿಗೂ ತಲುಪಬೇಕೆಂದು 12 ಉಪನಿಷತ್ತುಗಳಿಗೂ ಭಾಷ್ಯ ಬರೆದು ಪ್ರಿಂಟ್ ಮಾಡಿಸಿದ್ದಾರೆ. ಭಗವದ್ಗೀತೆಯಂತೂ 26 ಸಾವಿರ ಪ್ರಿಂಟ್ ಮಾಡಿ ಹಂಚಲಾಗಿದೆ. ಆಶ್ರಮದಿಂದ ಪ್ರಕಟಣೆಗೊಂಡ ಇತರ ಗ್ರಂಥಗಳಾದ, ನೈಷ್ಟರ್ಮಸಿದ್ಧಿ, ವಿಚಾರಸಾಗರ, ವಿಚಾರ ಚಂದ್ರೋದಯ, ವೇದಾಂತ ಪಂಚದಶಿ, ಇತ್ತೀಚೆಗೆ ಬಿಡುಗಡೆ ಆದ ಬ್ರಹ್ಮಸೂತ್ರ, ಶರಣಾಗತಿ ಇನ್ನೂ ಅನೇಕ ಗ್ರಂಥಗಳು ಆಶ್ರಮದಿಂದ ಪ್ರಕಟಣೆ ಕಂಡಿವೆ.