ಪುರಾಣ ಕಥೆಗಳು

ಭಕ್ತೆ ಮೀರಾದೇವಿ ಚಿಕ್ಕ ವಯಸ್ಸಿನಲ್ಲಿಯೇ ಭಕ್ತಳಾದ ಮೀರಾ ಅವರ ತಾಯಿಯ ಸಂಗಡ ಇರುವಾಗಲೇ ಅವರ ತಾಯಿ ಕೃಷ್ಣನನ್ನೇ ನಿನ್ನ ಪತಿ ಎಂದು ತೋರಿಸಿದಳು. ಅದೇ ಆಕೆಗೆ ಶಾಶ್ವತ ಬೋಧ ಆಯಿತು, ಲಗ್ನವಾಯಿತು. ಆಗಲು ಗಿರಿಧರ ಗೋಪಾಲನೇ ನನ್ನ ಪತಿ ಎನ್ನುತ್ತಿದ್ದಳು. ಪತಿಯು ಮಹಾರಾಜನಾದರೂ ಸಾಮಾನ್ಯರ ಜೊತೆಯಲ್ಲಿ ಕುಳಿತು ಗಿರಿಧರ ಗೋಪಾಲನ ಭಜನೆ ಮಾಡುತ್ತಿದ್ದಳು. ಅದನ್ನು ಏನು ಮಾಡಿದರೂ ಬಿಡಿಸಲಾಗಲಿಲ್ಲ. ಆಕೆಯ ರಾಜಮನೆತನದವರಾರು ಸಾಮಾನ್ಯರ ಜೊತೆಯಲ್ಲಿ ಕುಳಿತು ಭಜನೆ ಮಾಡುವುದು ಅವರಿಗೆ ಸರಿ ಕಾಣಲಿಲ್ಲ. ಅವರು ಎಷ್ಟೇ ವಿರೋಧಿಸಿದರೂ ಅವಳು ಸಾಮಾನ್ಯರ ಜೊತೆಯಲ್ಲಿ ಭಜನೆ ಮಾಡುವುದನ್ನು ಬಿಡಲಿಲ್ಲ. ಒಂದು ಸಾರಿ ಒಂದು ಪೆಟ್ಟಿಗೆಯಲ್ಲಿ ಮಿಡಿ ನಾಗರ ಸರ್ಪವನ್ನು ಹಾಕಿ ಬೃಂದಾವನದಿಂದ ಶ್ರೀ ಗಿರಿಧರ ಗೋಪಾಲನು ಬಂದಿದ್ದಾನೆ ತೆಗೆದುಕೊ ಎಂದಾಗ ಆಕೆಗೆ ಬಹಳ ಸಂತೋಷವಾಗಿ ಗಿರಿಧರ ಗೋಪಾಲ ಎಂದು ಕಣ್ಣು ತುಂಬ ನೀರನ್ನು ಹರಸುತ್ತಾ ಮುಟ್ಟುತ್ತಾಳೆ. ಅದು ನಿಜವಾದ ಗಿರಿಧರ ಗೋಪಾಲನೇ ಆಗುತ್ತದೆ. ಆಕೆಯ ಸ್ಥಿತಿ ಅಂತಹ ಉತ್ತಮ ಮಟ್ಟಕ್ಕೆ ಏರಿತ್ತು. ಎಲ್ಲೆಲ್ಲಿಯೂ ಗಿರಿಧರ ಗೋಪಾಲನನ್ನೇ ನೋಡುತ್ತಿದ್ದಳು. ಬೃಂದಾವನದಿಂದ ಗಿರಿಧರ ಗೋಪಾಲನ ತೀರ್ಥ ಬಂದಿದೆ ಎಂದು ವಿಷವನ್ನು ಕೊಟ್ಟರು. ಆಗ ಆಕೆ ಬಹಳ ಆನಂದದಿಂದ ಆ ತೀರ್ಥವನ್ನು ಕುಡಿದಳು. ಅದು ತೀರ್ಥವೇ ಆಗಿತ್ತು. “ಯಾದೃಶಿ ಬಾವನ ಯಸ್ಯ ಸಿದ್ಧಿರ್ಭವತಿ ತಾದೃಶಿ” ಯಾರು ಯಾರಿಗೆ ಯಾವ ಯಾವ ಭಾವನೆ ಇರುತ್ತದೆಯೋ ಅವರಿಗೆ ಹಾಗೆಯೇ ಆಗುತ್ತದೆ. ಎಲ್ಲೆಲ್ಲಿಯೂ ಆ ಗಿರಿಧರ ಗೋಪಾಲನನ್ನೇ ನೋಡುತ್ತಿದ್ದಳು. ಸಾಮಾನ್ಯರಂತೆ ಆ ಭಗವಂತನ ನಾಮವನ್ನು ಹೇಳುತ್ತಾ ಕುಣಿಯುತ್ತಿದ್ದಳು. ಎಲ್ಲೆಲ್ಲಿಯೂ ಭಗವಂತನನ್ನು ನೋಡಿರಿ. ಆಗ ನೀವು ಆನಂದವಾಗಿರುತ್ತೀರಿ.