ನೀತಿ ಕಥೆಗಳು

ಮದಾಲಸ ಕಥೆ - ಹೊಸದು ಮದಾಲಸ ಎಂಬ ರಾಜನ ಹೆಂಡತಿ ಬಹಳ ಧರ್ಮವಂತೆ, ತ್ಯಾಗಶೀಲೆ, ಆದರ್ಶಗೃಹಿಣಿ. ಒಂದು ಮಗು ಹಡೆದಳು, ಆ ಮಗುವಿಗೆ ಎದೆ ಹಾಲು ಕುಡಿಸುವಾಗ, ತೊಟ್ಟಿಲಲ್ಲಿ ಮಲಗಿಸುವಾಗ, ಸದಾ ಕಾಲದಲ್ಲಿಯೂ ನೀನು ದೇಹವಲ್ಲ, ನೀನು ಬ್ರಹ್ಮಸ್ವರೂಪನು, ನೀನು ನಿತ್ಯನು, ಬುದ್ಧನು, ನಿರಂಜನನು, ಈ ದೇಹ ಹಿಂದೆ ಇರಲಿಲ್ಲ, ಈಗ ಬಂದಿದೆ, ಸ್ವಲ್ಪದಿವಸ ಇರುತ್ತದೆ, ಕೊನೆಗೆ ನಾಶವಾಗುತ್ತದೆ. "ಜಾತಸ್ಯ ಧ್ರುವೊ ಮೃತ್ಯು: ಧ್ರುವಂ ಜನ್ಮ ಮೃತಸ್ಯಚ" ಎಂಬ ಗೀತಾ ವಾಣಿಯಂತೆ "ಹುಟ್ಟಿದವನು ಸಾಯಲೇಬೇಕು, ಸತ್ತ ಮೇಲೆ ಹುಟ್ಟಲೇಬೇಕು, ಆದ್ದರಿಂದ ಈ ಜನನ ಮರಣ ಎಂಬ ಚಕ್ರದಿಂದ ಹೊರಗೆ ಬರಬೇಕಾದರೆ, ನಾನು ಯಾರು? ನಾನು ಏತಕ್ಕೋಸ್ಕರ ಬಂದಿದ್ದೇನೆ, ತನ್ನ ಸ್ವಸ್ವರೂಪವಾದ ಆತ್ಮನನ್ನು ತಿಳಿಯುವುದು ಹೇಗೆ" ಎಂಬುದನ್ನು ಹೇಳಿ ಹೇಳಿ, ತನ್ನ ಮೂರು ಜನ ಮಕ್ಕಳನ್ನೆಲ್ಲ ಸನ್ಯಾಸಿಗಳನ್ನಾಗಿ ಮಾಡಿದಳು. ತಂದೆ ರಾಜನಿಗೆ ಮುಂದೆ ರಾಜ್ಯವನ್ನು ಆಳುವ ರಾಜನೇ ಇಲ್ಲದಂತಾಗುತ್ತದೆ? ಎಂದು ಯೋಚನೆ ಮಾಡಿ, ನಾಲ್ಕನೇ ಮಗುವು ಹುಟ್ಟಿದ ಕೂಡಲೇ ಬಹು ದೂರ ತಾಯಿಯಿಂದ ದೂರ ಮಾಡಿ ಬೇರೆ ಕಡೆ ಬೆಳೆಸಿದ. ಹಾಗೆ ದೊಡ್ಡವನಾದ ರಾಜಕುಮಾರ ತಂದೆ-ತಾಯಿ ನಂತರ ರಾಜ್ಯಕ್ಕೆ ಮರಳಿ, ರಾಜನು ಆದ.

ಒಂದು ದಿವಸ ಆ ರಾಜ್ಯಕ್ಕೆ ಪರರಾಜರು ಬಂದು ಮುತ್ತಿಗೆ ಹಾಕಿದರು, ಇವನು ಶಸ್ತ್ರ ಅಭ್ಯಾಸ ಕಲಿತಿಲ್ಲ ಅಳುತ್ತಾ ಕುಳಿತ, ಆಗ ಅವನನ್ನು ಸಾಕಿದ ದಾಸಿ ಒಬ್ಬಳು ಬಂದು, ನಿನ್ನ ತಾಯಿ ಹೇಳಿದ್ದರು, ನಿನಗೆ ದುಃಖ ಬಂದಾಗ ನಿನ್ನ ಕುತ್ತಿಗೆಯಲ್ಲಿರುವ ತಾಮ್ರದ ತಾಯಿತವನ್ನು ಬಿಚ್ಚಿ ಓದು ಎಂದು ಹೇಳಿದ್ದರು, ಅದರಂತೆ ಮಾಡಿ ಎಂದು ಹೇಳಿದಳು. ಅವನು ದಾಸಿ ಹೇಳಿದಂತೆ, ಆ ತಾಯಿತವನ್ನು ಬಿಚ್ಚಿ ಓದಿದ ಅದರಲ್ಲಿ ಅವರ ತಾಯಿ ಬರೆದಿದ್ದಳು, "ಸಿದ್ಧೋಸಿ ಬುದ್ಧೋಸಿ ನಿರಂಜನೋಸಿ ಸಂಸಾರ ಮಾಯಾ ಪರಿವಜ್ರಿತೋಸಿ ಸಂಸಾರ ಸ್ವಪ್ನಮ್ತ್ಯಜಮೋಹ ನಿದ್ರಾ ಮದಾಲಸ ಪುತ್ರ ಉವಾಚ" ಅಂದರೆ ನೀನು ಸಿದ್ದನೂ ಬುದ್ದನೂ ನಿರಂಜನನು, ಈ ದೇಹ ಹಾಗೂ ಸಂಸಾರ ಬರೀ ಜಾಗೃತಾವಸ್ಥೆಯಲ್ಲಿ ಇರುತ್ತದೆ, ಸ್ವಪ್ನದಲ್ಲಿ ಬೇರೆಯೇ ಪ್ರಪಂಚ, ಸುಪ್ತಾವಸ್ಥೆಯಲ್ಲಿ ಹೆಂಡತಿ ಮಕ್ಕಳು ಯಾವುದು ಇಲ್ಲ, ಇವೆಲ್ಲವೂ ಅನಿತ್ಯ, ಅಂದರೆ ಒಂದು ಅವಸ್ಥೆಯಲ್ಲಿದ್ದು ಇನ್ನೊಂದು ಅವಸ್ಥೆಯಲ್ಲಿ ಇಲ್ಲದೇ ಇರುವುದು, ಆದ್ದರಿಂದ ಈ ಸಂಸಾರ ದೇಹ ಇವೆಲ್ಲವೂ ಮಿಥೈ, ಈ ಮೋಹ ನಿದ್ರೆಯಿಂದ ಹೇಳು ಎಂಬುದಾಗಿತ್ತು. ಕೂಡಲೇ ರಾಜಕುಮಾರ ಮುತ್ತಿಗೆ ಹಾಕಿರುವವರ ಹತ್ತಿರ ಹೋಗಿ, ಅವರಿಗೆ ತನ್ನೆಲ್ಲ ರಾಜ್ಯವನ್ನು ಅರ್ಪಿಸಿದ. ಅವರು ಯಾರು ಅಂದರೆ, ಅವರು ಬೇರೆ ಯಾರೂ ಅಲ್ಲ, ಅವರ ಅಣ್ಣಂದಿರು. ಅವನನ್ನು ಬ್ರಹ್ಮಜ್ಞಾನಿನನ್ನಾಗಿ ಮಾಡಿದರು. ಇದು ಒಂದು ಮದಾಲಸ ಎಂಬ ತಾಯಿಯು ಮಕ್ಕಳಿಗೆ ಕೊಟ್ಟ ಶಿಕ್ಷಣ.

ನೀತಿ: ತಾಯಿಯೂ ಮಗನನ್ನು ಒಬ್ಬ ಕಳ್ಳನನ್ನಾಗಿಯೊ, ಒಬ್ಬ ರಾಜನನ್ನಾಗಿಯೊ, ಸನ್ಯಾಸಿಯನ್ನಾಗಿಯೂ, ಶೂರನನ್ನಾಗಿಯೂ, ವಿನೋಬಾಭಾವೆ ಅವರಂಗೆ ತ್ಯಾಗಿಯನ್ನಾಗಿಯೂ, ಗಾಂಧೀಜಿಯವರಂತೆ ರಾಷ್ಟ್ರಚಿಂತಕರನ್ನಾಗಿಯೂ ಮಾಡಬಲ್ಲಳು. ಆದ್ದರಿಂದ ತಂದೆ ತಾಯಿಯ ಪಾತ್ರ ಮಕ್ಕಳ ಮೇಲೆ ಒಳ್ಳೆಯ ಪರಿಣಾಮವನ್ನು ಉಂಟುಮಾಡಬಲ್ಲದು. ಆದ್ದರಿಂದ ಭಕ್ತಮಹಾಶಯರೇ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಚಿಕ್ಕಂದಿನಲ್ಲಿಯೇ ಕಲಿಸಿ ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡಬಹುದು.