ನೀತಿ ಕಥೆಗಳು

ಅಗಸನ ಮಗ ಅರಸನಾದ ಒಂದು ಸಮೃದ್ಧವಾದ ದೇಶ. ಆ ರಾಜನಿಗೆ ಮೂರನೇ ಮಗ ಮೂಲ ನಕ್ಷತ್ರದಲ್ಲಿ ಹುಟ್ಟಿದ. ಜ್ಯೋತಿಷ್ಯರು ಈ ಮಗು ತಂದೆಯ ಮರಣಕ್ಕೆ ಕಾರಣವಾಗುತ್ತಾನೆ ಎಂದು ಹೇಳಿದರು. ರಾಜನು ಆ ಮಗುವನ್ನು ಬಹುದೂರ ಅರಣ್ಯದಲ್ಲಿ ಬಿಟ್ಟು ಬಂದನು. ಒಬ್ಬ ಅಗಸನು ಬಟ್ಟೆ ತೊಳೆಯಲು ಹತ್ತಿರವಿರುವ ಕೆರೆಗೆ ಹೋದ. ದೂರದಲ್ಲಿ ಒಂದು ಮಗು ಅಳುತ್ತಿತ್ತು. ಅಗಸನು ಕೂಡಲೇ ಅಲ್ಲಿಗೆ ಹೋದ. ಮಗುವನ್ನು ನೋಡಿದ. ಅವನಿಗೆ ಬಹಳ ಸಂತೋಷವಾಯಿತು. ಆ ಮಗುವನ್ನು ಎತ್ತಿಕೊಂಡು ಮನೆಗೆ ಬಂದು ಹೆಂಡತಿಗೆ ತೋರಿಸಿದ. ಅವರಿಗೆ ಮಕ್ಕಳಿರಲಿಲ್ಲ. ಭಗವಂತನೇ ಮಗನನ್ನು ಕರುಣಿಸಿದ್ದಾನೆಂದು ದಂಪತಿಗಳು ಸಂತೋಷಪಟ್ಟರು. ಅವನನ್ನು ಸಾಕಿ ದೊಡ್ಡವನಾದ ಮೇಲೆ ಶಾಲೆಗೆ ಕಳಿಸಿದರು. ಬಹಳ ಚುರುಕು ಬುದ್ಧಿ. ಬಹಳ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ. ಅವನು ರಜಾ ಕಾಲದಲ್ಲಿ ತಂದೆ ಜೊತೆಯಲ್ಲಿ ಕುಲಕಸುಬು ಬಟ್ಟೆ ತೊಳೆಯುವುದಕ್ಕೆ ಹೋಗುತ್ತಿದ್ದ. 12 ವರ್ಷವಾಯಿತು. ಆ ಮಗು ಕತ್ತೆಗಳನ್ನು ಮೇಯಿಸಲು ಅರಣ್ಯಕ್ಕೆ ಹೋಗಿದ್ದ. ಅಲ್ಲಿಯೇ ದಾರಿಯಲ್ಲಿ ಬಂದ ಹಸ್ತಸಾಮುದ್ರಿಕೆಯವನು ಮಗುವನ್ನು ನೋಡಿದ, ಕೈ ನೋಡಿದ. ಈ ಮಗು ರಾಜನ ಮಗು ಕತ್ತೆ ಕಾಯುತ್ತಿದ್ದಾನಲ್ಲ ಆಶ್ಚರ್ಯವಾಯಿತು. ಮಗು ಎಂದು ಎಬ್ಬಿಸಿದ. ಕೇಳಿದ ‘ನೀನು ಯಾರು?’ ಎಂದು. ‘ನಾನು ಅಗಸ ರಾಮಪ್ಪನ ಮಗ. ನನ್ನ ತಾಯಿ ಸರಸ್ವತಿ’ ಎಂದ. ಮನೆಗೆ ಬಂದು ವಿಚಾರಿಸಿದ. ಅವರ ತಂದೆ ಇದ್ದ ವಿಷಯ ಹೇಳಿದ. ಹಿಂದೆ ನಾನು ಬಟ್ಟೆ ತೊಳೆಯಲು ಹೋಗಿದ್ದೆ. ಮಗು ಅಳುತ್ತಿತ್ತು. ತಂದು ಮನೆಯಲ್ಲಿ ಸಾಕಿದೆವು ಎಂದ. ಯಾವ ದಿವಸ ಎಂದಾಗ ಯುಗಾದಿ ಆಗಿ ಮೂರು ದಿವಸ ಆಗಿತ್ತು. ರವಿವಾರ ಎಂದು ಹೇಳಿದ. ಕೂಡಲೇ ಆ ಹಸ್ತ ಮುದ್ರಿಕೆಯವನು ನೇರವಾಗಿ ರಾಜನ ಅರಮನೆಗೆ ಹೋದ. ‘ರಾಜ ಸುಳ್ಳು ಹೇಳಬೇಡ. ನನ್ನ ಸಾಮುದ್ರಿಕೆಯನ್ನು ನಾನೇ ಪರೀಕ್ಷೆ ಮಾಡುವ ಕಾಲ ಬಂದಿದೆ. ಸತ್ಯವನ್ನೇ ಹೇಳು. ನಿನಗೆ ಮಕ್ಕಳು ಎಷ್ಟು ಜನ?’ ‘ಎರಡು ಜನ’ ಎಂದ. ‘ಸುಳ್ಳು ಹೇಳಬೇಡ.’ ‘ಸ್ವಾಮಿ ಮೂರನೇ ಮಗ ಮೂಲಾನಕ್ಷತ್ರದಲ್ಲಿ ಹುಟ್ಟಿತ್ತು. ಅದನ್ನು ಕಾಡಿನಲ್ಲಿ ಬಿಸಾಕಿಸಿದೆ’ ಎಂದ. ‘ಆ ದಿವಸ ಯಾವುದು ಯುಗಾದಿ ಆಗಿ ಮೂರು ದಿವಸ’ ಎಂದ.

‘ರಾಜ ನೀನು ಬಿಸಾಕಿದ ಮಗುವೇ ಈ ಮಗು. ಇದನ್ನು ಬಿಸಾಕಿ ಹನ್ನೆರಡು ವರ್ಷವಾಗಿದೆ. ಆ ದುಷ್ಟ ನಕ್ಷತ್ರ ಶಕ್ತಿ ಹಾರಿ ಹೋಗಿದೆ. ಇವನೇ ನಿನ್ನ ಮೂರನೇ ಮಗ’ ಎಂದು ಆ ಮಗುವನ್ನು ಕೊಟ್ಟ. ನೋಡಿ ಇಲ್ಲಿಯವರೆಗೆ ಅಗಸನ ಮಗು ಆಗಿದ್ದ ಹುಡುಗ ಈಗ ರಾಜನಾದ. ಹಾಗೆಯೇ ನಾವು ಮನುಷ್ಯನಾಗಿ ಹುಟ್ಟಿದವನು, ಸಾಯುವವನು ಎಂದು ದೇಹಭಾವನೆಯಿಂದ ಇದ್ದವನನ್ನು ಅವನಿಗೆ ನೀನು ದೇಹವಲ್ಲ. ಅದು ಒಂದು ಬಟ್ಟೆ ಇದ್ದಂತೆ. ಒಂದು ಬಟ್ಟೆ ಬಿಟ್ಟು ಮತ್ತೊಂದು ಬಟ್ಟೆ ತೊಡುವಂತೆ ಒಂದು ಶರೀರ ಬಿಟ್ಟು ಮತ್ತೊಂದು ಶರೀರ ಧಾರಣೆ ಮಾಡುತ್ತಾನೆ. ಆಗ ಅಗಸರ ರಾಮಪ್ಪನ ಮಗ ಈಗ ರಾಜನ ಮಗ ಎಂದಾಗ ಏನು ಬದಲಾವಣೆ ಆದ? ಭಾವನೆ ಬದಲಿಸಿದ ಹಾಗೆ ನಾನು ದೇಹ ಎಂದು ಅಂದುಕೊಂಡವರಿಗೆ ಶ್ರೀ ಗುರುಗಳಿಂದ ನೀವು ದೇಹವಲ್ಲ ಆತ್ಮಸ್ವರೂಪ. ನೀನು ಬ್ರಹ್ಮ ಎಂದು ತಿಳಿದು ಆನಂದ ಸ್ವರೂಪರಾಗಬೇಕು.