ಮಹಾಭಾರತ ಕಥೆಗಳು

ಅರ್ಜುನನ ಶ್ರೇಷ್ಠ ತಪಸ್ಸು ಪಂಚಪಾಂಡವರ ವನವಾಸ ಮುಗಿಯಲು ಇನ್ನು ಸ್ವಲ್ಪವೇ ದಿನಗಳು ಉಳಿದಿತ್ತು. ಆಗ ಧರ್ಮರಾಜನು ತಮ್ಮನಾದ ಅರ್ಜುನನನ್ನು ಕರೆದು ತಮ್ಮನೇ!. ನಮ್ಮ ವನವಾಸವು ಮುಗಿಯುತ್ತಾ ಬಂದರೂ ಯುದ್ಧ ಮಾಡಿಯೇ ನಮ್ಮ ರಾಜ್ಯವನ್ನು ಪಡೆಯಬೇಕೆಂದು ತೋರುತ್ತದೆ. ನಮ್ಮ ಹಗೆಗಳೋ ಮಹಾಬಲವುಳ್ಳವರು. ನೀನು ಬಿಲ್ಲು ವಿದ್ಯೆಯಲ್ಲಿ ಪರಿಣತನಾದವನು. ಮುಂದೆ ಬರುವ ಯುದ್ಧದಲ್ಲಿ ನಮ್ಮ ಜಯ ನಿನ್ನ ಕೈಯಲ್ಲಿದೆ. ಹಿಂದೆ ನನಗೆ ವ್ಯಾಸ ಮುನಿಗಳು ಒಂದು ಮಂತ್ರವನ್ನು ಉಪದೇಶಿಸಿದ್ದರು. ಅವರು ತಿಳಿಸಿದಂತೆ ನಾವು ತಪಸ್ಸು ಮಾಡಿ ಶಿವನಿಂದ ಶಕ್ತಿಯುತವಾದ ಅಸ್ತ್ರಗಳನ್ನು ಪಡೆಯಬಹುದು. ಆ ಮಂತ್ರವನ್ನು ನಾನು ನಿನಗೆ ಉಪದೇಶಿಸುತ್ತೇನೆ. ನೀನು Éಆಯುಧ ಪಾಣಿಯಾಗಿ ಪಶ್ಚಿಮ ದಿಕ್ಕಿನತ್ತ ಹೋಗಿ ತÀಪಸ್ಸು ಮಾಡು. ಮೊದಲು ಇಂದ್ರನನ್ನು ಕುರಿತು ತಪಸ್ಸು ಮಾಡು. ನಿನ್ನ ತಪಸ್ಸಿಗೆ ಮೆಚ್ಚಿ ಇಂದ್ರನು ಹಲವು ವರಗಳನ್ನು ನೀಡುತ್ತಾನೆ. ಆನಂತರ ನೀನು ಇಲ್ಲಿಗೆ ಹಿಂತಿರುಗಿ ಬಾ’ ಎಂದನು.

ಧರ್ಮಪುತ್ರನಿಂದ ಮಂತ್ರೋಪದೇಶವನ್ನು ಪಡೆದು, ಎಲ್ಲರಿಂದ ಬೀಳ್ಕೊಂಡು ಅರ್ಜುನನು ಪಶ್ಚಿಮದಿಕ್ಕಿನತ್ತ ಹೊರಟನು. ಹಿಮಾಲಯದ ತಪ್ಪಿಲಿನಲ್ಲಿರುವ ಇಂದ್ರಕೀಲ ಪರ್ವತದ ಶಿಖರವನ್ನು ತಲುಪಿದನು. ಅವನು ವೇಗವಾಗಿ ಹೋಗುತ್ತಿರುವಾಗ `ಹೋಗಬೇಡ, ನಿಲ್ಲು’ ಎಂದು ಒಂದು ಧ್ವನಿಯು ಕೇಳಿಸಿತು. ದಿಗ್ಭ್ರಮೆಗೊಂಡು ಅರ್ಜುನನು ಹಿಂತಿರುಗಿ ನೋಡಿದಾಗ, ಮರದ ಕೆಳಗಡೆ ಒಬ್ಬರು ಸಾಧುಗಳು ನಿಂತಿರುವುದನ್ನು ಕಂಡನು. ಅವರು ಇವನನ್ನು ನೋಡಿ `ಯುವಕನೇ ನೀನಾರು? ಋಷಿಗಳೂ ಮುನಿಗಳೂ ತಪಸ್ಸು ಮಾಡುವ ಈ ಜಾಗಕ್ಕೆ ನೀನೊಬ್ಬ ಯುದ್ಧ ವೀರನ ವೇಷದಲ್ಲಿ ಏಕೆ ಬಂದೆ? ಪ್ರಶಾಂತವಾದ ಈ ಸ್ಥಳಕ್ಕೆ ಆಯುಧಗಳನ್ನು ಹಿಡಿದು ನೀನು ಬಂದ ಕಾರಣವೇನು? ನಿನ್ನ ಬಿಲ್ಲು ಬಾಣಗಳನ್ನು ಈ ಕೂಡಲೇ ತೊರೆದುಬಿಡು’ ಎಂದು ಆ ಜಟಾಧಾರಿಯಾದ ಸಾಧು ಹೇಳಿದರು.

ಆದರೆ ಅರ್ಜುನನು ಅವರು ಹೇಳಿದಂತೆ ಮಾಡದೆ ಅಚಲವಾಗಿ ನಿಂತನು. ಆ ಸಾಧು ಅರ್ಜುನನನ್ನು ಗದರಿಸಿ ಬೆದರಿಸಿದರು. ನಯವಾಗಿ ಹೇಳಿದರು. ಆಸೆ ತೋರಿದರು. ಆದರೂ ಅರ್ಜುನ ಅಚಲವಾಗಿದ್ದ. ಕೊನೆಗೆ ಸಂತೋಷಗೊಂಡ ಆ ಸಾಧು ಅರ್ಜುನನನ್ನು ನೋಡಿ, `ನಿನ್ನ ದೃಢತ್ವವನ್ನು ನಾನು ಮೆಚ್ಚಿಕೊಂಡಿದ್ದೇನೆ. ನಾನೇ ದೇವೇಂದ್ರ ನಿನಗೆ ಏನು ಬೇಕೋ ಅದನ್ನು ಕೇಳಿಕೋ’ ಎಂದನು. ಕೂಡಲೇ ಅರ್ಜುನನು ಇಂದ್ರನ ಪಾದಗಳಲ್ಲಿ ಬಿದ್ದನು `ಹೇ ದೇವ, ನಮಸ್ಕರಿಸುತ್ತೇನೆ. ನಿಮ್ಮಿಂದ ಪ್ರಬಲವಾದ ಅಸ್ತ್ರಗಳನ್ನು ಪಡೆಯಲೆಂದೇ ಇಲ್ಲಿದೆ ಬಂದೆ, ಕೃಪೆ ಮಾಡಬೇಕು’ ಎಂದನು. ಆಗ ಇಂದ್ರನು `ಹೇ ಪುತ್ರ, ನೀನು ಶಿವನನ್ನು ಕುರಿತು ತಪಸ್ಸು ಮಾಡಿದೆಯಾದರೆ ನಿನ್ನೆ ಆಸೆ ನೆರವೇರುವುದು’ ಎಂದನು. ಅರ್ಜುನನನ್ನು ಆಶೀರ್ವದಿಸಿ ಮರೆಯಾದನು.

ಅರ್ಜುನನ ತಪಸ್ಸು ಅತಿ ಘೋರವಾದದ್ದು. ಮೂರು ದಿನಗಳಿಗೆ ಒಂದು ಬಾರಿಯಂತೆ ಮೂವತ್ತು ದಿನಗಳೂ ಬರೀ ಹಣ್ಣುಗಳನ್ನೇ ತಿಂದನು. ಅದರ ಮುಂದಿನ ತಿಂಗಳು ಆರು ದಿನಗಳಿಗೆ ಒಮ್ಮೆಯಂತೆ, ಮೂರನೆಯ ತಿಂಗಳು ಹದಿನೈದು ದಿನಗಳಿಗೊಮ್ಮೆಯಂತೆ ಹಣ್ಣನ್ನು ತಿಂದನು. ನಾಲ್ಕನೆಯ ತಿಂಗಳು ತಿನ್ನುವುದನ್ನೇ ನಿಲ್ಲಿಸಿಬಟ್ಟನು. ಗಾಳಿಯನ್ನು ಮಾತ್ರ ಉಸಿರಾಡುತ್ತಿದ್ದನು. ಕಾಲಿನ ಹೆಬ್ಬೆರಳನ್ನು ಮಾತ್ರ ನೆಲದಲ್ಲಿ ಊರಿ ನಿಂತು ತಪಸ್ಸನ್ನು ಮಾಡಿದನು. ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದ ಋಷಿಗಳು ಅರ್ಜುನನ ವಿಚಾರವನ್ನು ಪರಮಶಿವನಿಗೆ ತಿಳಿಸಿದರು. ಕಿರಿಯವನಾದ ವೀರ ಅರ್ಜುನ, ಮನಸ್ಥೈರ್ಯದಿಂದ ತನ್ನ ಸಹೋದರರಿಗಾಗಿ ಕಷ್ಟಪಟ್ಟು ತಪಸ್ಸು ಮಾಡುತ್ತಿರುವುದನ್ನು, ಕಂಡು ಪರಮಶಿವನಿಗೆ ಬಹಳ ಸಂತೋಷವಾಯಿತು. ಆದರೂ ಆ ಅರ್ಜುನನ ಬಲವನ್ನು ಸ್ಥೈರ್ಯವನ್ನೂ ಪರೀಕ್ಷಿಸಿ ಲೋಕಕ್ಕೆಲ್ಲಾ ಅದನ್ನು ತಿಳಿಸಬೇಕೆಂದು ಶಿವನು ಸಂಕಲ್ಪಿಸಿದನು. ಭಯಂಕರವಾದ ಅತಿ ದೊಡ್ಡದಾದ ಕಾಡು ಹಂದಿಯೊಂದು ಬೆಟ್ಟದ ಪ್ರದೇಶದಿಂದ ತನಗೆದುರಾಗಿ ಬರುತ್ತಿರುವುದನ್ನು ಅರ್ಜುನನು ಕಂಡನು. ಚೂಪಾದ ಉಗುರುಗಳನ್ನು ಚಾಚಿ ಸಿಡಿಲಿನಂತೆ ಗರ್ಜಿಸುತ್ತಾ ಅದು ವೇಗವಾಗಿ ಬರುತ್ತಿತ್ತು. ಕೂಡಲೇ ಮಿಂಚಿನ ವೇಗದಿಂದ ತನ್ನ ಗಾಂಡೀವ ಧನುಸ್ಸನ್ನು ಎದೆಗೇರಿಸಿ ಕಾಡು ಹಂದಿಗೆ ಗುರಿಯಿಟ್ಟು ಬಾಣವನ್ನು ಬಿಟ್ಟನು.

ಅರ್ಜುನನ ಚೂಪಾದ ಬಾಣವು ಕಪ್ಪನೆಯ ಬೆಟ್ಟದಂತಿದ್ದ ಕಾಡು ಹಂದಿಯ ದೇಹವನ್ನು ಎರಡು ಪಾಲಾಗಿ ಸೀಳಿತು. ಅದೇ ಕ್ಷಣದಲ್ಲೇ ಮತ್ತೊಂದು ಕಡೆಯಿಂದ ಒಂದು ಬಾಣವು ಆ ಹಂದಿಯ ದೇಹವನ್ನು ಹೊಕ್ಕಿತು. ಆಶ್ಚರ್ಯಗೊಂಡ ಅರ್ಜುನನು ಬಾಣ ಬಂದ ಕಡೆಗೆ ತಿರುಗಿ ನÉೂೀಡಿದನು. ಸ್ವಲ್ಪ ದೂರದಲ್ಲಿ ಒಬ್ಬ ಬೇಟೆಗಾರನು ನಿಂತಿದ್ದನು. ಆ ಬೇಡನನ್ನು ಕಂಡ ಕೂಡಲೇ ಅರ್ಜುನನಿಗೆ ಕಡುಕೋಪವುಂಟಾಯಿತು. ಕಣ್ಣು ಕೆಂಪಗಾಗಿ ಕನಲಿ `ಏ ಬೇಟೆಗಾರನೇ, ಈ ಕಾಡು ಹಂದಿಯ ಶರೀರದಲ್ಲಿ ಮೊದಲು ಹೊಕ್ಕಿದ್ದು ನನ್ನ ಬಾಣ. ನಾನು ಗುರಿಯಿಟ್ಟ ಬೇಟೆಗೆ ನೀನು ಬಾಣ ಬಿಟ್ಟದ್ದು ಬೇಟೆಯ ನಿಯಮಕ್ಕೆ ವಿರುದ್ದವಾದದ್ದು. ನಿಯಮವನ್ನು ಮೀರಿ ನಡೆದುಕೊಂಡ ನಿನ್ನನ್ನು ಜೀವ ಸಹಿತ ಬಿಡಲಾರೆ’ ಎಂದನು. ಆದರೆ, ಬೇಟೆಗಾರನು ಸ್ವಲ್ಪವೂ ವಿಚಲಿತನಾಗದೆ ಪರಿಹಾಸವಾಗಿ ನಕ್ಕನು. ನಂತರ `ಅರಿವಿಲ್ಲದ ಎಳೆಯನೇ, ಏಕೆ ಹೀಗೆ ಆತುರದಿಂದ ಕೂಗಾಡುವೆ. ಇದು ನನ್ನ ಬೇಟೆ. ನನಗೆ ಸೇರಿದ್ದು. ಇದೋ ಈಗ ನೋಡು ನನ್ನ ಬಾಣಕ್ಕೆ ನೀನೇ ಬಲಿಯಾಗುವೆ’ ಎಂದನು. ಬೇಡನ ಮಾತನ್ನು ಕೇಳಿ ಅರ್ಜುನನ ಕೋಪ ಇನ್ನೂ ಏರಿತು. ಕ್ರೋಧದಿಂದ ತೀವ್ರವಾದ ಬಾಣಗಳನ್ನು ಬಿಟ್ಟನು. ಬಾಣಗಳ ಮಳೆ ಕರೆದರೂ ಒಂದು ಬಾಣವೂ ಬೇಡನ ಮೈ ಸೋಕಲಿಲ್ಲ. ಅವನು ನಗುತ್ತಲೇ ಇದ್ದನು. ಬಾಣಗಳೆಲ್ಲವೂ ಮುಗಿದವು. ಕೂಡಲೇ ಗಾಂಡೀವ ಧನುಸ್ಸನೇ ಬೇಡನ ಕೊರಳಿಗೆ ಹಾಕಿ ತನ್ನಡೆಗೆ ಸೆಳೆದನು. ಆದರೆ ಬೇಡನು, ಗಾಂಡೀವವನ್ನು ಅರೆಕ್ಷಣದಲ್ಲಿ ತನ್ನಡೆಗೆ ಎಳೆದನು. ಆಗ ಅರ್ಜುನನು ತನ್ನ ಕತ್ತಿಯನ್ನು ಬೀಸಿದನು. ಸಿಂಹದಂತೆ ನೆಗೆದ ಆ ಅರ್ಜುನನ ಕೈಯಲ್ಲಿರುವ ಕತ್ತಿಯು ಬೇಡನ ತಲೆಯನ್ನು ತಾಕಿತೋ ಇಲ್ಲವೋ ಒಡೆದು ಚೂರು ಚೂರಾಯಿತು. ಬೇಡನಾದರೋ ಅಲಕ್ಷ್ಯದಿಂದ ಮುಗುಳ್ನಗುತ್ತಿದ್ದನು.

ಸ್ವಲ್ಪ ಕಾಲ ಇಬ್ಬರೂ ಹೋರಾಡಿದರು. ಅರ್ಜುನನಿಗೆ ಮೇಲುಸಿರು ಬಂದಿತು. ಕಣ್ಣು ಕತ್ತಲಿಟ್ಟಿತು. ಕೆಳಗೆ ಬೀಳುವ ಸ್ಥಿತಿ ಬಂದಿತು. ಆಗ ಪ್ರಕಾಶಮಾನವಾದ ಬೆಳಕು ಕಂಡಿತು. ಬೇಡನನ್ನೇ ಅರ್ಜುನನು ನಿಟ್ಟಿಸಿ ನೋಡಿದನು. ತಾನು ಶಿವನನ್ನು ಪೂಜಿಸಿ ಅಂದು ಶಿವನಿಗೆ ಸಮರ್ಪಿಸಿದ ಮಾಲೆಯು ಬೇಟೆಗಾರನ ಕೊರಳಲ್ಲಿದ್ದದನ್ನು ಕಂಡು ಆಶ್ಚರ್ಯವಾಯಿತು. ಆದರೆ ಬೇಟೆಗಾರನಾಗಿ ಬಂದವನು ಶಿವನೇ ಎಂಬುದು ತಿಳಿಯಿತು. ಕೂಡಲೇ, ಅವನ ಪಾದಗಳಲ್ಲಿ ಬಿದ್ದು ನಮಸ್ಕರಿಸಿದನು. ಅರ್ಜುನನ ವೀರ ಪರಾಕ್ರಮಗಳಿಂದ ಸಂತೋಷಗೊಂಡಿದ್ದ ಶಿವನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ನೀಡಿ ಆಶೀರ್ವದಿಸಿದನು. ನಂತರ ಇಂದ್ರನೂ, ವರುಣನೂ, ವಾಯುದೇವನೂ, ಕುಬೇರನೂ ಇತರ ದಿಕ್ಪಾಲಕರೂ ಪ್ರತ್ಯಕ್ಷರಾಗಿ ಅರ್ಜುನನಿಗೆ ಅಪರೂಪವಾದ ಅಸ್ತ್ರಗಳನ್ನು ಅನುಗ್ರಹಿಸಿದರು. ಇಂದ್ರನು ಅರ್ಜುನನ ತಪಸ್ಸನ್ನು, ಪರಾಕ್ರಮವನ್ನೂ ಕೊಂಡಾಡಿದನು. ನಂತರ ಸ್ವರ್ಗದಲ್ಲಿ ತನ್ನ ಅತಿಥಿಯಾಗಿರುವಂತೆ ಆಹ್ವಾನವನ್ನಿತ್ತನು. ಅವನ ಆಜ್ಞೆಯಂತೆಯೇ ಅರ್ಜುನನು ಸಂತೋಷದಿಂದ ಸ್ವರ್ಗಲೋಕಕ್ಕೆ ತೆರಳಿದನು.